ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಹಕಾರ ಸಚಿವ ಕೆಎನ್ ರಾಜಣ್ಣ ಗಳಸ್ಯ ಕಂಟಸ್ಯ. ನಿಜವಾಗಲೂ ಸಿದ್ದರಾಮಯ್ಯ ಅವರಿಗೆ ರಾಜಣ್ಣ ಆವಾಜ್ ಹಾಕುತ್ತಾರಾ ಎನ್ನುವ ಅನುಮಾನ ಬರಬಹುದು. ಆದರೆ ರಾಜಣ್ಣ, ಸಿದ್ದರಾಮಯ್ಯ ಮೇಲೆ ಆಕ್ರೋಶಭರಿತವಾಗಿ ಮಾತನಾಡಿರುವುದು ನಿಜ.
ರಾಜ್ಯದಲ್ಲಿ ಈಗ ಅಧಿಕಾರ ಹಂಚಿಕೆ ಬಗ್ಗೆ ತರಾವರಿ ಚರ್ಚೆಗಳು ನಡೆಯುತ್ತಿವೆ. ಒಬ್ಬರು ತಾವೇ ಹೋಗಿ ಕಾಂಗ್ರೆಸ್ ಹೈಕಮಾಂಡ್ ಬಳಿ ಕೇಳಿಕೊಂಡು ಬಂದವರಂತೆ ಸಿಎಂ ಆಗಿ ಸಿದ್ದರಾಮಯ್ಯ ಅವಧಿ ಎರಡೇ ವರ್ಷ ಎನ್ನುತ್ತಾರೆ. ಇನ್ನೊಬ್ಬರು ಫಿಫ್ಟಿ-ಫಿಫ್ಟಿ ಒಪ್ಪಂದವಾಗಿದೆ, ಎರಡೂವರೆ ವರ್ಷ ಎನ್ನುತ್ತಾರೆ. ಮತ್ತೊಬ್ಬರು ಕರ್ನಾಟಕದಲ್ಲಿ ಅತಿ ಹೆಚ್ಚು ದಿನ ಮುಖ್ಯಮಂತ್ರಿಯಾಗಿದ್ದ ದಿವಂಗತ ಡಿ. ದೇವರಾಜ ಅರಸು ಅವರ ದಾಖಲೆ ಮುರಿಯುವವರೆಗೆ ಸಿದ್ದರಾಮಯ್ಯ ಕದಲುವುದಿಲ್ಲ ಎಂದು ಕಡ್ಡಿ ಮುರಿದಂತೆ ಮಾತನಾಡುತ್ತಾರೆ. ಮಗದೊಬ್ಬರು ಎರಡಲ್ಲ ಮೂರು ವರ್ಷ ಅಂತಾ ಸತ್ಯದ ತಲೆ ಮೇಲೆ ಹೊಡೆದಂತೆ ಹೇಳುತ್ತಾರೆ. ಸಿದ್ದರಾಮಯ್ಯ ಆಪ್ತರು ಇವೆಲ್ಲವನ್ನೂ ಸಾರಾಸಗಟಾಗಿ ತಿರಸ್ಕರಿಸಿ ಐದು ವರ್ಷಕ್ಕೂ ಸಿದ್ದರಾಮಯ್ಯ ಅವರೇ ಸಿಎಂ ಎಂದು ಬಹುಪರಾಕ್ ಹಾಕುತ್ತಾರೆ.
ಇದು ಮಾಧ್ಯಮದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಬಣಗಳ ನಡುವೆ ವಾಕ್ಸಮರಕ್ಕೂ ವೇದಿಕೆ ಒದಗಿಸುತ್ತಿದೆ ಅಲ್ವಾ? ಇಂಥದೇ ಒಂದು ಸಂದರ್ಭದಲ್ಲಿ ಕೆಎನ್ ರಾಜಣ್ಣ ಎದುಸಿರು ಬಿಟ್ಟುಕೊಂಡು ಸಿಎಂ ಗೃಹ ಕಚೇರಿಗೆ ಬಂದಿದ್ದಾರೆ. ಸೀದಾ ಸಿಎಂ ಬಳಿ ಹೋದವರೇ ‘ನೀವೇನೋ ಜಾತ್ರೆ ಮುಗಿಸಿಕೊಂಡು ಹೋಗಿಬಿಡುತ್ತೀರಿ, ನಮ್ಮ ಕತೆ ಏನು? ಎಂದು ಕೇಳಿದ್ದಾರೆ.
ಯಾವತ್ತೂ ತಮ್ಮೆದುರು ಏರು ದನಿಯಲ್ಲಿ ಮಾತನಾಡಿಲ್ಲದ, ಖುದ್ದಾಗಿ ಮುಂದೆ ನಿಂತು ಸಿದ್ದರಾಮಯ್ಯೋತ್ಸವದ ತಯಾರಿ ನೋಡಿಕೊಂಡಿದ್ದ, ಪ್ರತಿಹಂತದಲ್ಲೂ ತಮ್ಮ ನಾಯಕತ್ವ ಬೆಂಬಲಿಸಿದ್ದ ರಾಜಣ್ಣ ಇದ್ದಕ್ಕಿದ್ದಂತೆ ರೋಷದಲ್ಲಿ ಮಾತನಾಡುವುದನ್ನು ಕಂಡು ಸಿದ್ದರಾಮಯ್ಯ ಗಲಿಬಿಲಿಯಾಗಿದ್ದಾರೆ. ಸಿದ್ದರಾಮಯ್ಯ ಅವರ ಪಕ್ಕವಾದ್ಯಗಳಂತಿರುವ ಸಚಿವರಾದ ಜಮೀರ್ ಅಹಮದ್ ಮತ್ತು ಭೈರತಿ ಸುರೇಶ್ ಎಸಿಯಲ್ಲಿದ್ದೂ ಬೆವರಿದ್ದಾರೆ. ಸಿದ್ದರಾಮಯ್ಯ ತಕ್ಷಣವೇ ಸಿಬ್ಬಂದಿಗೆ ಎಲ್ಲರನ್ನು ಹೊರಗೆ ಕಳಿಸಿ, ಬಾಗಿಲು ಹಾಕುವಂತೆ ಸೂಚಿಸಿ ‘ಏನಾಯ್ತು ಏಕೆ ಹೀಗೆ ಮಾತಾಡ್ತಿದೀಯಾ?’ ಎಂದು ಕೇಳಿದ್ದಾರೆ.
ಸಿದ್ದರಾಮಯ್ಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜಣ್ಣ, ‘ಅಧಿಕಾರ ಹಂಚಿಕೆ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ನೀವು ಮಾತ್ರ ಸುಮ್ಮನೆ ಇದ್ದೀರಿ. ನೀವೇನೋ ನಿಮ್ಮ ಕೆಲಸ ಮುಗಿದ ಮೇಲೆ ಹೊರಟುಹೋಗುತ್ತೀರಿ. ಬೇಕಾದರೆ ಬೆಂಗಳೂರಿನಲ್ಲಿ ಇರುತ್ತೀರಿ, ಇಲ್ಲದಿದ್ದರೆ ಮೈಸೂರಿಗೆ ಹೋಗಿ ಸೆಟಲ್ ಆಗಿಬಿಡುತ್ತೀರಿ. ಆದರೆ ನಿಮ್ಮನ್ನೇ ನಂಬಿಕೊಂಡಿರುವ ನಾಯಕರ ಪಾಡೇನು? ಇಷ್ಟಕ್ಕೂ ಡಿಕೆ ಶಿವಕುಮಾರ್ ಸಿಎಂ ಆದರೆ ನಾವೆಲ್ಲಾ ಏನು ಮಾಡೋಕಾಗುತ್ತೆ? ಹೈಕಮಾಂಡ್ ಮಟ್ಟದಲ್ಲಿ ನಿಜವಾಗಿಯೂ ನಡೆದಿರುವುದು ಏನು ಅಂತಾ ಹೇಳಿಬಿಡಿ. ನಾವು ನಮ್ಮ ದಾರಿ ನೋಡಿಕೊಳ್ಳುತ್ತೇವೆ’ ಎಂದಿದ್ದಾರೆ.
ರಾಜಣ್ಣ ಮಾತನ್ನು ಕೇಳಿಸಿಕೊಂಡ ಸಿದ್ದರಾಮಯ್ಯ, ‘ಸೋನಿಯಾ ಗಾಂಧಿ ಅವರಾಗಲಿ, ರಾಹುಲ್ ಗಾಂಧಿ ಅವರಾಗಲಿ ನನಗೆ ಸಿಎಂ ಸ್ಥಾನ ಬಿಟ್ಟುಕೊಡುವ ಬಗ್ಗೆ ಏನನ್ನೂ ಹೇಳಿಲ್ಲ. ಡೋಂಟ್ ವರಿ’ ಎಂದಿದ್ದಾರೆ. ಆ ಮೂಲಕ ಸೋನಿಯಾ ಅಥವಾ ರಾಹುಲ್ ಗಾಂಧಿ ಹೇಳಿದರೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವೆ, ಇಲ್ಲದಿದ್ದರೆ ಇಲ್ಲ ಎಂಬ ಸಂದೇಶ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಮಾತಿನಿಂದ ತೃಪ್ತರಾದ ರಾಜಣ್ಣ ನಗುನಗುತ್ತಾ ಕಾಫಿ ಕುಡಿದು ಹೊರಗೆ ಹೋಗಿದ್ದಾರೆ. ಅದಾದ ಮೇಲೆ ಅವರು ಇನ್ನಷ್ಟು ಜೋರಾಗಿ ಸಿದ್ದರಾಮಯ್ಯ ಪರ ವಕಾಲತ್ತು ವಹಿಸುತ್ತಿದ್ದಾರೆ.
ಕೆಲವೊಮ್ಮೆ ಆಪ್ತರ ಕೋಪದಲ್ಲಿ ನಿಜವಾದ ಕಾಳಜಿ ಇರುತ್ತದೆ. ಕೂತು ಮಾತನಾಡಿ, ಇರುವ ಗೊಂದಲಗಳನ್ನು ಬಗೆಹರಿಸಬೇಕು. ಕೋಪಗೊಂಡವರನ್ನು ಸರಿಯಾದ ರೀತಿಯಲ್ಲಿ ಸಮಾಧಾನಪಡಿಸಬೇಕು. ಈ ಕಲೆ ರಾಜಕೀಯಕ್ಕೆ ಹೆಚ್ಚು ಅಗತ್ಯ. ಕರಗತ ಮಾಡಿಕೊಂಡವರಿಗೆ ರಾಜಕೀಯದಲ್ಲಿ ಆಯುಷ್ಯ ಹೆಚ್ಚು. ಸಿದ್ದರಾಮಯ್ಯ ಅವರಿಗೆ ಅದು ಸಿದ್ದಿಸಿದಂತಿದೆ.

0 Comments