ಕಾಂಗ್ರೆಸ್ ಪಕ್ಷಕ್ಕೆ ಮರ್ಯಾದೆ ಇದ್ದರೆ ಶ್ರೀರಾಮುಲುವನ್ನು ಯಾವ ಕಾರಣಕ್ಕೂ ಸೇರಿಸಿಕೊಳ್ಳಬಾರದು… ಇದು ರಾಜ್ಯ ಕಾಂಗ್ರೆಸ್ ನಾಯಕರೊಬ್ಬರ ಸ್ಪಷ್ಟ ಅಭಿಪ್ರಾಯ. ನಾನು ಏಕೆ ಎಂದು ಕೇಳದಿದ್ದರೂ ಅವರೇ ವಿವರಿಸುತ್ತಾ ಹೋದರು. ಕಾಂಗ್ರೆಸ್ ಪಕ್ಷ ಇದೇ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಗಣಿ ಅಕ್ರಮಗಳನ್ನು ವಿರೋಧಿಸಿ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದೆ. ರಾಮುಲು ಅರೋಗ್ಯ ಸಚಿವರಾಗಿದ್ದಾಗ ನಡೆದಿದೆ ಎನ್ನಲಾದ ಕೊರೋನಾ ಕಾಲದ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ತನಿಖೆಗೆ ಆದೇಶಿಸಿದೆ. ಮೇಲಾಗಿ ರಾಮುಲು ಬಾದಾಮಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಅಭ್ಯರ್ಥಿಯಾಗಿದ್ದರು. ಇಂಥ ರಾಮುಲುವನ್ನು ಪಕ್ಷಕ್ಕೆ ಸೇರಿಸಿಕೊಂಡರೆ ಮಾನ-ಮರ್ಯಾದೆ ಇರುತ್ತಾ? ಎಂದು ಪ್ರಶ್ನಿಸಿದರು.
ಇದೊಂದು ನಿದರ್ಶನವಷ್ಟೇ. ಇದರ ಹೊರತಾಗಿ ಕೂಡ ಡಿಕೆ ಶಿವಕುಮಾರ್ ಬಿಟ್ಟು ಬೇರಾರಿಗೂ ರಾಮುಲು ಕಾಂಗ್ರೆಸಿಗೆ ಬರುವುದು ಸುತಾರಾಂ ಇಷ್ಟ ಇಲ್ಲ. ಪರಿಶಿಷ್ಟ ಪಂಗಡ ಸಮುದಾಯದ ಪೈಕಿ ಸತೀಶ್ ಜಾರಕಿಹೊಳಿಗೆ ಪ್ರತಿಸ್ಪರ್ಧಿ ಸೃಷ್ಟಿಸುವ ಏಕಮಾತ್ರ ಕಾರಣಕ್ಕೆ ರಾಮುಲುವನ್ನು ಕಾಂಗ್ರೆಸಿಗೆ ತರಬೇಕೆಂಬುದು ಡಿಕೆಶಿ ಯೋಜನೆ. ಸತೀಶ್ ಮೇಲೆ ಸಿಟ್ಟೇಕೆ ಎಂದರೆ, ಬೆಳಗಾವಿಯಲ್ಲಿ ತಮ್ಮ ಆಪ್ತೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಳವಣಿಗೆಗೆ ಸತೀಶ್ ಅಡ್ಡವಾಗಿದ್ದಾರೆ ಎನ್ನುವುದು ಮೊದಲ ಕಾರಣ. ಸಿದ್ದರಾಮಯ್ಯ ಮತ್ತು ಸತೀಶ್ ಜಾರಕಿಹೊಳಿ ಒಂದಾಗಿದ್ದಾರೆ ಎನ್ನುವುದು ಇನ್ನೊಂದು ಕಾರಣ. ಸತೀಶ್ ಈಗ ಮುಖ್ಯಮಂತ್ರಿ ಹುದ್ದೆ ಕೇಳಿ ಕೆಪಿಸಿಸಿ ಸ್ಥಾನ ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದು ಮಗದೊಂದು ಕಾರಣ.
ಸಿದ್ದರಾಮಯ್ಯ ಮತ್ತು ಸತೀಶ್ ಜಾರಕಿಹೊಳಿ ಕಾರಣಕ್ಕೆ ರಾಜ್ಯದ ಉಳಿದ ನಾಯಕರು ಕೂಡ ರಾಮುಲು ಕರತರಲು ಒಪ್ಪುವುದಿಲ್ಲವೆಂದು ಡಿಕೆಶಿ ಹೈಕಮಾಂಡ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಮೋರೆ ಹೋಗಿದ್ದಾರೆ. ರಾಮುಲು ಬಂದರೆ ಪರಿಶಿಷ್ಟ ಪಂಗಡ ಸಂಪೂರ್ಣ ಕಾಂಗ್ರೆಸಿಗೆ ಬಂದಂತಾಗುತ್ತದೆ. ಈಗಾಗಲೇ ಆಂತರಿಕ ಕಿತ್ತಾಟದಿಂದ ಬಳಲಿ ಬೆಂಡಾಗಿರುವ ಬಿಜೆಪಿಗೆ ಮರ್ಮಾಘಾತ ನೀಡಿದಂತಾಗುತ್ತದೆ. ನಾನು ಈಗಾಗಲೇ ರಾಮುಲು ಮನವೊಲಿಸಿದ್ದೇನೆ, ನೀವು ಮಾತನಾಡಿ ಎಂದು ಹೇಳಿದ್ದಾರೆ. ಸುರ್ಜೆವಾಲಾ ಮರುಕ್ಷಣವೇ ರಾಮುಲುಗೆ ಕರೆ ಮಾಡಿ ಪಕ್ಷಕ್ಕೆ ಸೇರಿಸಿಕೊಳ್ಳುವ ಆಶ್ವಾಸನೆ ಮತ್ತು ಆಹ್ವಾನ ಕೊಟ್ಟಿದ್ದಾರೆ.
ಆಗಲೇ ಆಗಿದ್ದು ಎಡವಟ್ಟು. ಡಿಕೆಶಿ-ಸುರ್ಜೆವಾಲಾ ಸೇರಿಕೊಂಡು ರಾಮುಲು ತರುವ ಸರ್ಜರಿ ನಡೆಸುತ್ತಿದ್ದಾರೆ ಎಂದು ಗೊತ್ತಾಗಿದ್ದೇ ತಡ ಬಳ್ಳಾರಿ ನಾಯಕರು ಒಬ್ಬರಾದ ಮೇಲೆ ಒಬ್ಬರು ಸುರ್ಜೆವಾಲಾಗೆ ಕರೆ ಮಾಡಿದ್ದಾರೆ. ಬಿಲ್ ಕುಲ್ ರಾಮುಲುವನ್ನು ಪಕ್ಷಕ್ಕೆ ಬರಮಾಡಿಕೊಳ್ಳಬಾರದು. ರಾಮುಲು ಪಕ್ಷಕ್ಕೆ ಬಂದರೆ ಅವರ ವಿರುದ್ಧ ಹೋರಾಡಿ ಬಳ್ಳಾರಿ-ವಿಜಯನಗರದಲ್ಲಿ ಪಕ್ಷ ಕಟ್ಟಿರುವ ನಮ್ಮ ಕತೆ ಏನು? ಈಗ ರಾಮುಲು ಪ್ರಭಾವ ಮೊದಲಿನಂತೆ ಉಳಿದಿಲ್ಲ ಎಂದಿದ್ದಾರೆ. ಸುರ್ಜೆವಾಲಾ ಸಮಜಾಯಿಷಿ ಕೊಡಲು ಮುಂದಾದಾಗ ಮುಲಾಜೇ ಇಲ್ಲದೆ ಕಾಲ್ ಕಟ್ ಮಾಡಿದ್ದಾರೆ.
ಗಲಿಬಿಲಿಗೊಂಡ ಸುರ್ಜೆವಾಲಾ ಸೀದಾ ದೆಹಲಿಯ ರಾಜಾಜಿ ಮಾರ್ಗದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರ ಮನೆಗೆ ದೌಡಾಯಿಸಿದ್ದಾರೆ. ರಾಮುಲು ಸೇರ್ಪಡೆ, ಬಳ್ಳಾರಿ ನಾಯಕರ ಅಪಸ್ವರಗಳ ಬಗ್ಗೆ ಹೇಳಿದ್ದಾರೆ. ಸುರ್ಜೆವಾಲಾ ಮಾತನ್ನು ಆಲಿಸಿದ ಖರ್ಗೆ ಅವರು ‘ಈ ಬಗ್ಗೆ ಸಿದ್ದರಾಮಯ್ಯ ಜೊತೆ ಮಾತನಾಡಿದ್ದಿರಾ?’ ಎಂದು ಕೇಳಿದ್ದಾರೆ. ಸುರ್ಜೆವಾಲಾ ತಾಳಿದ ಮೌನವೇ ‘ಇಲ್ಲ’ ಎನ್ನುವ ಉತ್ತರವನ್ನು ಹೇಳುತ್ತಿದ್ದರಿಂದ ‘ಮೊದಲು ಅವರಿಗೆ ಫೋನ್ ಮಾಡಿ’ ಎಂದು ಗದರಿದ್ದಾರೆ. ಸುರ್ಜೆವಾಲಾ ಕರೆ ಸ್ವೀಕರಿಸಿದ ಸಿದ್ದರಾಮಯ್ಯ, ‘ನಮ್ಮ ಸರ್ಕಾರ ಯಡಿಯೂರಪ್ಪ, ರಾಮುಲು ಮುತ್ತು ಸುಧಾಕರ್ ವಿರುದ್ಧ ಕೋವಿಡ್ ಹಗರಣದ ತನಿಖೆ ನಡೆಸಲು ಕ್ರಮ ಕೈಗೊಂಡಿದೆ. ಈಗ ರಾಮುಲುವನ್ನು ಕಾಂಗ್ರೆಸಿಗೆ ಸೇರಿಸಿಕೊಂಡರೆ ಪಕ್ಷ ಮುಜುಗರCOngress ಅನುಭವಿಸಬೇಕಾಗುತ್ತದೆ. ಇದು ನನ್ನ ವೈಯಕ್ತಿಕ ನಿಲುವು, ನೀವು ಏನೂ ಬೇಕಾದರೂ ಮಾಡಿಕೊಳ್ಳಿ’ ಎಂದು ಮಾತುನಿಲ್ಲಿಸಿದ್ದಾರೆ. ಅಲ್ಲಿಗೆ ರಾಮುಲು ಕಾಂಗ್ರೆಸ್ ಸೇರುವ ಕತೆ ಮುಗಿದಿದೆ ಎನ್ನುತ್ತವೆ ದೆಹಲಿ ಮೂಲಗಳು.
ರಾಮುಲು ಕುಕ್, ಡ್ರೈವರ್ ಗಳಿಗೂ ಡಿಕೆಶಿ ಕಾಲ್
ಶ್ರೀರಾಮುಲುಗೆ ಮಾತ್ರವಲ್ಲ ಅವರ ಮನೆ ಅಡುಗೆಯವರು, ಅಟೆಂಡರ್ ಗಳು, ಡ್ರೈವರ್ ಗಳನ್ನೂ ಬಿಡಲ್ಲ. ಅವರಿಗೂ ಡಿಕೆ ಶಿವಕುಮಾರ್ ಫೋನ್ ಮಾಡುತ್ತಾರೆ. ವಿಶೇಷ ಏನಿಲ್ಲ, ರಾಮುಲು ಎಲ್ಲಿಗೆ ಹೋಗಿದ್ದರು, ಯಾವಾಗ ಹೋದರು? ಯಾವಾಗ ವಾಪಸ್ ಬಂದರು? ಯಾರ ಜೊತೆ ಮಾತನಾಡಿದರು ಎಂಬ ಪಿನ್ ಟು ಪಿನ್ ಮಾಹಿತಿ ಸಂಗ್ರಹಿಸುತ್ತಾರೆ. ಹೀಗೆ ರಾಮುಲು ಚಲನವಲನವನ್ನು ಪೂರ್ತಿ ಗಮನಿಸಿ ಗಾಳ ಹಾಕಿದ್ದಾರೆ. ಡಿಕೆಶಿ ‘ಇಕ್ಕಳ’ದಲ್ಲಿ ಸಿಲುಕಿರುವ ರಾಮುಲು ಬಿಡಿಸಿಕೊಳ್ಳಲು ಪರಿಪರಿ ಪರದಾಡುತ್ತಿದ್ದಾರೆ ಎನ್ನುತ್ತವೆ ಇಬ್ಬರನ್ನೂ ಬಲ್ಲವರು.
ಕಾಂಗ್ರೆಸಿಗೆ ರಾಮುಲು ಬೇಡ, ರಾಮುಲುಗೆ ಕಾಂಗ್ರೆಸ್ ಬೇಕು
ಎಲ್ಲೆಲ್ಲಿ ಶ್ರೀರಾಮುಲು ಪ್ರಾಬಲ್ಯವಿತ್ತೋ ಆ ಜಿಲ್ಲೆಗಳಲ್ಲಿ ಕಾಂಗ್ರೆಸ್ ಕಳೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದಿದೆ. ಆದ್ದರಿಂದಲೇ ರಾಜ್ಯದಲ್ಲಿ ಸರ್ಕಾರ ಬಂದ ನಂತರ ಇದೇ ಮೊದಲ ಬಾರಿಗೆ ಪರಿಶಿಷ್ಟ ಪಂಗಡದ ಮೂವರನ್ನು ಮಂತ್ರಿ ಮಾಡಲಾಗಿದೆ. ಈ ಮೂವರ ಪೈಕಿ ನಾಗೇಂದ್ರ ರಾಜೀನಾಮೆ ನೀಡಿದ್ದರೂ ಅವರು ಮತ್ತೆ ಸಂಪುಟ ಸೇರುವ ಸಾಧ್ಯತೆ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಹಿರಿಯ ಸಚಿವ ಸತೀಶ್ ಜಾರಕಿಹೊಳಿ ಈಗ ಪರಿಶಿಷ್ಟ ಪಂಗಡದ ನಾಯಕನಾಗಿ ಹೊರಹೊಮ್ಮಿದ್ದಾರೆ. ಅದರಿಂದ ಕಾಂಗ್ರೆಸಿಗೆ ರಾಮುಲು ಅಗತ್ಯವಿಲ್ಲ. ಆದರೆ ಒಡೆದ ಮನೆಯಾಗಿರುವ ಬಿಜೆಪಿಯಲ್ಲಿ ರಾಮುಲು ಅಸ್ತಿತ್ವಕ್ಕಾಗಿ ಹೋರಾಡಬೇಕಾಗಿದೆ. ವಿಜಯೇಂದ್ರ ಮತ್ತು ಜನಾರ್ದನ ರೆಡ್ಡಿ ಒಂದಾಗಿರುವುದರಿಂದ ಭವಿಷ್ಯದ ಬಗ್ಗೆ ಚಿಂತೆ ಶುರುವಾಗಿದೆ. ಹಾಗಾಗಿ ರಾಮುಲುಗೆ ಕಾಂಗ್ರೆಸ್ ಅನಿವಾರ್ಯವಾಗಿದೆ.

0 Comments