ಹಿಂದೆ ಬೆಳಗಾವಿಯ ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೋ ಹಾಕಿ ಅದು ದೊಡ್ಡ ವಿವಾದವಾಗಿತ್ತು. ಇತ್ತೀಚಿಗೆ ಸ್ಪೀಕರ್ ಯೂಟಿ ಖಾದರ್ ವಿಧಾನಸೌಧದಲ್ಲಿ ಮೈಸೂರು ಬಾಗಿಲು, ಗಂಡುಬೇರುಂಡ ಹಾಕಿ ‘ಹೊಸದೇನನ್ನೋ’ ಹೇಳಲು ಹೊರಟಿದ್ದರು. ಇದೀಗ ಶಾಸನಸಭೆಯ ಒಳಗೆ, ಆಡಳಿತ ಮತ್ತು ಪ್ರತಿಪಕ್ಷಗಳ ಲಾಂಜ್ ಗಳಲ್ಲಿ ಒಟ್ಟು ಎಂಟು ಕಡೆ ‘ಓಲ್ಡ್ ಪಬ್ಲಿಕ್ ಆಫೀಸ್’ ಫೋಟೋ ಹಾಕಲಿದ್ದಾರೆ ಎನ್ನುವ ಮಾಹಿತಿಗಳು ‘ಬೂಕನಕೆರೆ ಡೈರಿ’ಗೆ ಲಭಿಸಿವೆ.
ಏನದು ಓಲ್ಡ್ ಪಬ್ಲಿಕ್ ಆಫೀಸ್?
ಇದನ್ನು ಸರಳವಾಗಿ ಮೈಸೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿ ಎನ್ನಬಹುದು. ಹಿಂದೆ ಓಲ್ಡ್ ಪಬ್ಲಿಕ್ ಆಫೀಸ್ (ಸಾರ್ವಜನಿಕ ಕಚೇರಿ ಕಟ್ಟಡ) ಎನ್ನುವ ಹೆಸರಿನಲ್ಲಿ ಕರೆಯಲಾಗುತ್ತಿತ್ತು. ಈ ಕಟ್ಟಡದ ಮಹತ್ವ ಏನೆಂದರೆ, 1881ರ ಅಕ್ಟೋಬರ್ 07ರಂದು ಇಲ್ಲಿ ಪ್ರಜಾಪ್ರತಿನಿಧಿಗಳ ಮೊದಲ ಸಭೆ ನಡೆದಿತ್ತು. ಅಂದಿನ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸಿ. ರಂಗಾಚಾರ್ಲು ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಜಾಪ್ರತಿನಿಧಿಗಳ ಸಭೆಯಲ್ಲಿ ರೈತರು, ವರ್ತಕರು ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳ ಒಟ್ಟು 144 ಪ್ರತಿನಿಧಿಗಳು ಭಾಗವಾಹಿಸಿದ್ದರು.
1881ರ ಆಗಸ್ಟ್ 25ರಂದು 10ನೇ ಚಾಮರಾಜ ಒಡೆಯರ್ ಅವರು ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾಪಿಸಿದ್ದರು. ಆ ಮೂಲಕ ಮೈಸೂರು ಸಂಸ್ಥಾನಕ್ಕೆ ಇಡೀ ಭಾರತದಲ್ಲಿ ಮೊದಲು ಪ್ರಜಾಪ್ರಭುತ್ವ ಸಂಸ್ಥೆಯೊಂದನ್ನು ಆರಂಭಿಸಿದ ಮೊದಲ ರಾಜ್ಯ ಎನ್ನುವ ಹೆಗ್ಗಳಿಕೆಯನ್ನು ತಂದುಕೊಟ್ಟಿದ್ದರು. ಇದರ ನೆನಪಿಗಾಗಿ ಶಾಸನಸಭೆಯ ಒಳಗೆ, ಆಡಳಿತ ಮತ್ತು ಪ್ರತಿಪಕ್ಷಗಳ ಲಾಂಜ್ ಗಳಲ್ಲಿ ಒಟ್ಟು ಎಂಟು ಕಡೆ ‘ಓಲ್ಡ್ ಪಬ್ಲಿಕ್ ಆಫೀಸ್’ ಫೋಟೋಗಳನ್ನು ಹಾಕಲಾಗುತ್ತಿದೆ ಎಂದು ‘ಬೂಕನಕೆರೆ ಡೈರಿ’ಗೆ ತಿಳಿದುಬಂದಿದೆ.
ಶಾಸನಸಭೆಯ ಒಳಗೆ, ಆಡಳಿತ ಮತ್ತು ಪ್ರತಿಪಕ್ಷಗಳ ಲಾಂಜ್ ಗಳಲ್ಲಿ ಅಳವಡಿಸಲಾಗುತ್ತಿರುವ ಫೋಟೋಗಳಿಗೆ ಸ್ಪೆಷಲ್ ಲೈಟಿಂಗ್ ಎಫೆಕ್ಟ್ ಇರಲಿದೆ. ಕರ್ನಾಟಕದ ಘನ ಇತಿಹಾಸ, ಅದರಲ್ಲೂ ಪ್ರಜಾಪ್ರಭುತ್ವ ಹರಳುಗಟ್ಟಲು ಆದ ಪ್ರಯತ್ನಗಳ ಬಗ್ಗೆ ಶಾಸಕರಿಗೆ ‘ಓಲ್ಡ್ ಪಬ್ಲಿಕ್ ಆಫೀಸ್’ ಫೋಟೋಗಳು ನೆನಪಿಸಬೇಕು ಎನ್ನುವ ಕಾರಣಕ್ಕಾಗಿಯೇ ಸ್ಪೆಷಲ್ ಲೈಟಿಂಗ್ ಎಫೆಕ್ಟ್ ಮಾಡಲಾಗಿದೆ. ಸ್ಪೀಕರ್, ಮುಖ್ಯಮಂತ್ರಿ, ಸಚಿವರು ಮತ್ತು ಶಾಸಕರು ವಿಧಾನಸೌಧದ ಒಳ ಪ್ರವೇಶಿಸುತ್ತಿದ್ದ ದ್ವಾರವನ್ನು ‘ಮೈಸೂರು ಬಾಗಿಲಾಗಿ’ ಪರಿವರ್ತಿಸಿದ ಬಳಿಕ ಸಿಕ್ಕ ಉತ್ತಮ ಪ್ರತಿಕ್ರಿಯೆ ‘ಓಲ್ಡ್ ಪಬ್ಲಿಕ್ ಆಫೀಸ್’ ಫೋಟೋಗಳ ಬಗ್ಗೆಗೂ ಸಿಗುತ್ತದೆ ಎನ್ನುವ ನಿರೀಕ್ಷೆ ವಿಧಾನಸಭಾ ಸಚಿವಾಲಯದ್ದು.

0 Comments