ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟಿತ್ತು. ಮೈತ್ರಿಯಿಂದಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಲಾಭವೂ ಆಗಿತ್ತು. ಗ್ಯಾರಂಟಿ ಯೋಜನೆಗಳ ಜಾರಿ, ಸಿದ್ದರಾಮಯ್ಯ ಅವರಂಥ ಸಮರ್ಥ ನಾಯಕನ ಎದುರು 19 ಕ್ಷೇತ್ರಗಳನ್ನು ಗೆದ್ದ ಬಿಜೆಪಿ ವಿಧಾನಸಭೆಯಲ್ಲಿ ಹೋಗಿದ್ದ ಮಾನವನ್ನು ಲೋಕಸಭೆಯಲ್ಲಿ ಮರಳಿ ಪಡೆಯಿತು. ಜೆಡಿಎಸ್ ಜಯಿಸಿದ್ದು ಎರಡೇ ಸ್ಥಾನವಾದರೂ ಐದಾರು ಕಡೆ (ತುಮಕೂರು, ಕೋಲಾರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮೈಸೂರು) ಬಿಜೆಪಿಯನ್ನು ಗೆಲುವಿನ ದಡ ಮುಟ್ಟಿಸಿ ಕೇಂದ್ರದಲ್ಲಿ ಮಂತ್ರಿ ಸ್ಥಾನವನ್ನು ಗಿಟ್ಟಿಸಿಕೊಂಡಿತು.
ಲೋಕಸಭಾ ಚುನಾವಣೆ ಬಳಿಕ ಪ್ರಚಂಡ ಬಹುಮತ ಇದ್ದರೂ ರಾಜ್ಯದ ಕಾಂಗ್ರೆಸ್ ಸರ್ಕಾರ ಒಮ್ಮೆ ಬೆಚ್ಚಿದ್ದು ಇದೇ ಮೈತ್ರಿ ಕಾರಣಕ್ಕೆ. ಮೂಡಾ ವಿವಾದದಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ-ಜೆಡಿಎಸ್ ನಾಯಕರು ಪಾದಯಾತ್ರೆ ಮಾಡಿದಾಗ ರಾಜ್ಯದಲ್ಲಿ ಹೊಸ ಜೋಡೆತ್ತುಗಳು ಉದಯಿಸಿದವು ಎನ್ನುವ ಮಾತುಗಳು ಕೇಳಿಬಂದಿದ್ದವು. ಇತ್ತೀಚಿನ ವರ್ತಮಾನವನ್ನು ಹೇಳುವುದಾದರೆ ಇಂದಿಗೂ ಕಾಂಗ್ರೆಸ್ ಪಕ್ಷ ಬಿಬಿಎಂಪಿ, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ನಡೆಸಲು ಮೀನಾಮೇಷ ಎಣಿಸುತ್ತಿರುವುದು ಇದೇ ಮೈತ್ರಿಯ ಭಯದಿಂದಾಗಿ. ವಿರೋಧಿ ಮತಗಳು ಬಿಜೆಪಿ-ಜೆಡಿಎಸ್ ಮೈತ್ರಿ ಪಾಲಾದರೆ ಕಾಂಗ್ರೆಸ್ ಪಕ್ಷ ಸರ್ಕಾರ ಇದ್ದೂ ಮುಜುಗರ ಅನುಭವಿಸಬೇಕಾಗುತ್ತದೆ ಎನ್ನುವ ಕಾರಣಕ್ಕೆ.
ಕಾಂಗ್ರೆಸ್ ಪಕ್ಷದ ಪಾಲಿಗೆ ಸಿಂಹಸ್ವಪ್ನ ಆಗಬಹುದಾಗಿದ್ದ ಬಿಜೆಪಿ-ಜೆಡಿಎಸ್ ಪಕ್ಷಗಳ ಮೈತ್ರಿ ಬರಬರುತ್ತಾ ‘ಇದೆಯೋ ಇಲ್ಲವೋ’ ಎನ್ನುವ ಅನುಮಾನವನ್ನು ಹುಟ್ಟುಹಾಕಿದೆ. ಜೆಡಿಎಸ್ ನಾಯಕ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ದೆಹಲಿಯಿಂದ ಬೆಂಗಳೂರಿಗೆ ಬರುತ್ತಾರೆ. ಅವರಷ್ಟಕ್ಕವರು ಪತ್ರಿಕಾಗೋಷ್ಠಿ ಮಾಡುತ್ತಾರೆ. ಅಥವಾ ಅವರ ಮಾಧ್ಯಮ ತಂಡ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡುತ್ತದೆ. ಇವ್ಯಾವುದು ಇಲ್ಲ ಎಂದರೆ ಹೋದಲ್ಲಿ-ಬಂದಲ್ಲಿ ಮೈಕ್ ಹಿಡಿಯಲು ಟಿವಿಯವರು ಇದ್ದೇ ಇದಾರೆ. ಅಲ್ಲಿಗೆ ಕುಮಾರಸ್ವಾಮಿ ಅವರ ಹೋರಾಟ-ಹಾರಾಟ ಸಮಾಪ್ತಿಯಾಗುತ್ತದೆ.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಅವರ ಪಕ್ಷದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದೇ ಸಾಕುಸಾಕಾಗಿದೆ. ಯಾರೋ ಒಬ್ಬರು ‘ಬಚ್ಚಾ’ ಎಂದು ಬೈಯುತ್ತಾರೆ, ಇನ್ನೊಬ್ಬರು ‘ಸನ್ ಆಫ್’ ಎಂದು ಕುಟುಕುತ್ತಾರೆ, ಮತ್ತೊಬ್ಬರು ‘ವಿಜಯೇಂದ್ರ ನಾಯಕತ್ವ ಒಪ್ಪಲ್ಲ’ ಎಂದು ಕಿರಿಕ್ ಮಾಡುತ್ತಾರೆ. ಹೀಗೆ ಹಿಂದಿ, ಇಂಗ್ಲಿಷ್ ಮತ್ತು ಕನ್ನಡದಲ್ಲಿ ಭಿನ್ನಮತೀಯ ನಾಯಕರು ಭಿನ್ನ ಭಿನ್ನವಾಗಿ ಕೊಡುವ ಹೇಳಿಕೆಗಳಿಗೆ ಪ್ರತಿಕ್ರಿಯೆ ಕೊಡುತ್ತಾ, ಯತ್ನಾಳ್ ಬಣಕ್ಕೆ ಪ್ರತಿಯಾಗಿ ಯಾರಿಂದ ಸಭೆ ಮಾಡಿಸಬೇಕು? ಯಾವ ಹೇಳಿಕೆ ಕೊಡಿಸಬೇಕು ಎನ್ನುವುದರಲ್ಲೇ ವಿಜಯೇಂದ್ರ ಹೈರಾಣವಾಗಿದ್ದಾರೆ. ಒಟ್ಟಿನಲ್ಲಿ ಕುಮಾರಸ್ವಾಮಿ ಒಂದು ತೀರ, ವಿಜಯೇಂದ್ರ ಇನ್ನೊಂದು ತೀರ, ಮೈತ್ರಿ ನಾಯಕರು ದೂರ ದೂರ… ಎನ್ನುವಂತಾಗಿದೆ.
ಮೂಡಾ ಪ್ರಕರಣದ ಬಳಿಕ ಬಿಜೆಪಿ-ಜೆಡಿಎಸ್ ಮೈತ್ರಿಯ ಒಂದೇ ಒಂದು ಜಂಟಿ ಹೋರಾಟ ನಡೆದಿಲ್ಲ. ಒಂದೇ ಒಂದು ಜಂಟಿ ಪತ್ರಿಕಾಗೋಷ್ಠಿ ಏರ್ಪಟ್ಟಿಲ್ಲ. ಎರಡೂ ಪಕ್ಷಗಳ ನಾಯಕರನ್ನೊಳಗೊಂಡ ಸಭೆ ನಡೆದು ಆರು ತಿಂಗಳಾಗಿದೆ. ಇದರಿಂದಾಗಿ ಎರಡೂ ಪಕ್ಷಗಳ ಕೆಳ ಹಂತದ ನಾಯಕರು ಮತ್ತು ಕಾರ್ಯಕರ್ತರನ್ನು ಬಿಜೆಪಿ-ಜೆಡಿಎಸ್ ಮೈತ್ರಿ ಮುರಿದು ಬಿದ್ದಿದೆಯಾ ಅನುಮಾನ ದಟ್ಟವಾಗಿ ಕಾಡುತ್ತಿದೆ.
ಕುಮಾರಸ್ವಾಮಿ ಗುಪ್ತ ಸಭೆ
ಇನ್ನೂ ಕುತೂಹಲಕಾರಿ ಸಂಗತಿ ಎಂದರೆ ವಿಜಯೇಂದ್ರ ವಿರುದ್ಧ ಬಂಡೆದ್ದಿರುವ ಬಿಜೆಪಿ ನಾಯಕರಾದ ವಿ. ಸೋಮಣ್ಣ, ರಮೇಶ್ ಜಾರಕಿಹೊಳಿ ಮತ್ತು ಶ್ರೀರಾಮುಲು ಜೊತೆ ಕುಮಾರಸ್ವಾಮಿ ಕದ್ದುಮುಚ್ಚಿ ಸಭೆ ನಡೆಸಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದರೆ ಬೇರಾರಿಗೂ ಕಾಣಿಸುವುದಿಲ್ಲವೇ… ಈ ಕಳ್ಳಾಟ ವಿಜಯೇಂದ್ರಗೆ ಗೊತ್ತಾಗಿದೆಯಂತೆ. ನಮ್ಮದೇ ನೂರು ಸಮಸ್ಯೆ, ಅವುಗಳ ಮಧ್ಯೆ ಇವರು ನಮ್ಮದೆಲ್ಲಿಡಲಿ ಅಂತಾ ಮೂಗು ತುರಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಬಗ್ಗೆ ವಿಜಯೇಂದ್ರ ಗುರ್ರ್ ಎನ್ನುತ್ತಿದ್ದಾರಂತೆ.

0 Comments